ಹೊಲದ ಬದುವಿನಲ್ಲಿ ಹೊಂಗೆ ಬೆಳೆದು (Honge Krushi) ಅಧಿಕ ಆದಾಯ ಗಳಿಸಲು ರೈತರಿಗೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಹನುಮನಮಟ್ಟಿಯ ಜೈವಿಕ ಇಂಧನ ಕೇಂದ್ರ ಸುವರ್ಣಾವಕಾಶ ನೀಡಿದೆ…
ಖುಷ್ಕಿ ವಾತಾವರಣದ ಪ್ರದೇಶಗಳಲ್ಲಿ ಬೇವು, ಹೊಂಗೆ (Pongamia) ಚೆನ್ನಾಗಿ ಬೆಳೆಯುತ್ತವೆ. ಇವುಗಳ ಬೀಜಕ್ಕೆ ಈಗ ಭಾರೀ ಡಿಮ್ಯಾಂಡ್ ಕುದುರುತ್ತಿದೆ. ಹೊಂಗೆ ಮತ್ತು ಬೇವಿನ ಬೀಜಗಳಿಂದ ಡಿಸೇಲ್, ಪೆಟ್ರೋಲ್ಗೆ ಪರ್ಯಾಯವಾಗಿ ಪರಿಸರಸ್ನೇಹಿ ಜೈವಿಕ ಇಂಧನ ತಯಾರಿಕೆ ಮಾಡಲಾಗುತ್ತಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಂಗೆ ಬೇಸಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ. ಇದಕ್ಕಾಗಿಯೇ ವಿಶೇಷ ಯೋಜನೆಗಳನ್ನು ಕೈಗೊಂಡಿವೆ.

ಹನುಮನಮಟ್ಟಿ ಜೈವಿಕ ಇಂಧನ ಸಂಶೋಧನಾ ಕೇಂದ್ರ
ಇದಕ್ಕಾಗಿ ರಾಜ್ಯ ಸರ್ಕಾರದಿಂದ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸ್ಥಾಪಿತಗೊಂಡು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಾಹಿತಿ ಮತ್ತು ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ `ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ’ವಿದ್ದು 2012ರಿಂದ ಕಾರ್ಯ ನಿರ್ವಹಿಸುತ್ತಿದೆ.
ಹಾವೇರಿ ಜಿಲ್ಲೆಯ ಎಲ್ಲಾ ತಾಲ್ಲೂಕಗಳ ರೈತ ಬಾಂಧವರಿಗೆ, ಕೃಷಿ ಕಾರ್ಮಿಕರಿಗೆ ಜೈವಿಕ ಇಂಧನದ ಬೀಜ ಖರೀದಿ, ಬೀಜ ಸಂಸ್ಕರಣೆ, ಜೈವಿಕ ಡೀಸೆಲ್, ಉಪ ಉತ್ಪನಗಳ ಉತ್ಪಾದನೆ ಮತ್ತು ಬಳಕೆ ಇತ್ಯಾದಿ ಕುರಿತು ತರಬೇತಿ ನೀಡುವ ಕಾರ್ಯವನ್ನು ಕೈಗೊಳ್ಳುತ್ತಿದೆ.
ಜೈವಿಕ ಇಂಧನವು `ಪರಿಸರ ಸ್ನೇಹಿ’ಗೆ ಉತ್ತಮ ಉದಾಹರಣೆಯಾಗಿದೆ ಹಾಗೂ ಕೃಷಿಗೆ ಪೂರಕವಾದ ಮತ್ತು ಲಾಭದಾಯಕ ಉದ್ಯಮವೆಂದು ಈ ಕೇಂದ್ರದ ಮೂಲಕ ರೈತರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಉದ್ಯಮಿಗಳಿಗೆ, ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ.
ಸ್ನಾತಕೋತ್ತರ ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂಶೋಧನೆ ಕೈಗೊಳ್ಳಲು ಸೂಕ್ತ ಅವಕಾಶ ಕಲ್ಪಿಸುತ್ತದೆ. ಒಟ್ಟಾರೆ ಪ್ರತಿಯೊಬ್ಬರೂ ಈ ಕೇಂದ್ರದಿAದ ಸದುಪಯೋಗ ಪಡೆದುಕೊಳ್ಳಹುದಾಗಿದೆ.

ಹೊಂಗೆ ಬೀಜ ಖರೀದಿ, ಡಿಸೇಲ್ ಮಾರಾಟ
ಈ ಜೈವಿಕ ಇಂಧನ ಕೇಂದ್ರದಲ್ಲಿ ಹೊಂಗೆಯ ಸಿಪ್ಪೆಯನ್ನು ತೆಗೆಯುವ ಯಂತ್ರ ಹಾಗೂ ಬೀಜ ಅರೆದು ಎಣ್ಣೆ ತೆಗೆಯುವ ಯಂತ್ರ, ಎಣ್ಣೆ ಸಂಸ್ಕರಿಸಿ ಜೈವಿಕ ಡೀಸೆಲ್ ಉತ್ಪಾದಿಸುವ ಘಟಕ ಹೀಗೆ ವಿವಿಧ ಯಂತ್ರೋಪಕರಣಗಳನ್ನು ವೀಕ್ಷಿಸಬಹುದಾಗಿದೆ.
ಜೈವಿಕ ಡೀಸೆಲ್ ಮತ್ತು ಅದರ ತಯಾರಿಕೆಯಲ್ಲಿ ಬರುವ ಉಪ ಉತ್ಪನ್ನಗಳಾದ ಹಿಂಡಿ, ಗ್ಲಿಸರಿನ್ಗಳ ಉಪಯೋಗ ಮತ್ತು ಅವುಗಳ ಮಾರಾಟಕ್ಕೆ ಸಂಬAಧಿಸಿದ ಸಂಪೂರ್ಣ ಮಾಹಿತಿ ಈ ಕೇಂದ್ರದಿಂದ ದೊರೆಯಲಿದೆ. ಈ ಕೇಂದ್ರವು ದಿನಕ್ಕೆ 50 ಲೀಟರ್ ಡೀಸೆಲ್ ತಯಾರಿಸುವ ಸಾಮರ್ಥ್ಯ ಹೊಂದಿದೆ.
ಇಲ್ಲಿ ಯೋಗ್ಯ ಬೆಲೆಗೆ ಹೊಂಗೆ (ಹುಲುಗಲು) ಕಾಯಿಗಳನ್ನು ಅಥವಾ ಬೀಜಗಳನ್ನು ಖರೀದಿ ಮಾಡಲಾಗುತ್ತದೆ. ಇದರಿಂದ ತಯಾರಾದ ಜೈವಿಕ ಡೀಸೆಲ್ ಮಾರಾಟಕ್ಕೆ ಸಿಗುತ್ತದೆ ಹಾಗೂ ಶುದ್ಧೀಕರಿಸಿದ ಹೊಂಗೆಯ ಎಣ್ಣೆ ಸಿಗುತ್ತದೆ. ಅಲ್ಲದೇ ಉಪ ಉತ್ಪನ್ನಗಳಾದ ಹಿಂಡಿ, ಗ್ಲಿಸರಿನ್ ಇತ್ಯಾದಿಗಳನ್ನು ಮಾರಾಟ ಮಾಡಲಾಗುತ್ತದೆ.
ಈ ಕೇಂದ್ರದಲ್ಲಿ ದೊರೆಯುವ ಜೈವಿಕ ಇಂಧನವನ್ನು (ಡೀಸೆಲ್ನ್ನು) ಮಾರುಕಟ್ಟೆಯಲ್ಲಿ ದೊರೆಯುವ ಡೀಸೆಲ್ನೊಂದಿಗೆ ಶೇಕಡಾ 5, 10, 20ರ ಪ್ರಮಾಣದಲ್ಲಿ ಬಳಸಬೇಕು. (ಶೇಕಡಾ 100ರ ಪ್ರಮಾಣದಲ್ಲೂ ಇದನ್ನು ಉಪಯೋಗಿಸಬಹುದು) ಜೈವಿಕ ಇಂಧನವು ಮಾರುಕಟ್ಟೆಯ ಡೀಸೆಲ್ಗಿಂತ ಕಡಿಮೆ ದರದಲ್ಲಿ ದೊರೆಯುತ್ತದೆ.

ಪರಿಸರಸ್ನೇಹಿ ಇಂಧನ
ಆಧುನಿಕ ಜಗತ್ತಿನ ದಿನನಿತ್ಯದ ಬಳಕೆಯಲ್ಲಿರುವ ವಸ್ತುಗಳಲ್ಲಿ ಇಂಧನವೂ ಒಂದು. ಮಾನವನ ವೈಜ್ಞಾನಿಕ ಅಭಿವೃದ್ಧಿಯಿಂದಾಗಿ ಭೂ ಶಿಲಾ ಪಳಿಯುಳಿಕೆಯಿಂದ ದೊರೆಯುವ ದ್ರವ ರೂಪದ ಇಂಧನಗಳಾದ ಪೆಟ್ರೋಲ್, ಡೀಸೆಲ್ಗಳ ಕೊರತೆ ಒಂದು ಕಡೆಯಾದರೆ, ಇನ್ನೊಂದು ಕಡೆ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ನಿಸರ್ಗದತ್ತವಾಗಿ ದೊರೆಯುವ ಈ ಇಂಧನ ನವೀಕರಿಸಲಾರದ್ದಾಗಿದ್ದು, ಕೆಲವೇ ವರ್ಷಗಳಲ್ಲಿ ಮುಗಿದು ಹೋಗಬಹುದು.
ಪೆಟ್ರೋಲಿಯಂ ಸಂಸ್ಕರಣೆಯಿಂದ ಉತ್ಪಾದನೆಗೊಳ್ಳುವ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಅನಿಲ ಮತ್ತು ಉಪ ಉತ್ಪನ್ನಗಳಾದ ಸೀಮೆ ಎಣ್ಣಿ ಇತ್ಯಾದಿ ಇಂಧನಗಳ ಮಿತಿಮೀರಿದ ಬಳಕೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಭೂತಾಪಮಾನ ವಿಕೋಪಕ್ಕೆ ತಿರುಗುತ್ತಿದೆ. ಮಣ್ಣು ಮತ್ತು ನೀರು ಕಲುಷಿತವಾಗುತ್ತಿದೆ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹೊರೆಯಾಗುತ್ತಿದೆ.
ಇವೆಲ್ಲವುಗಳಿಂದ ಭೂ ಜೀವಸಂಕುಲಗಳ ಬದುಕಿಗೆ ಸಮಸ್ಯೆಯಾಗುತ್ತಿದೆ ಮತ್ತು ಪ್ರತಿಯೊಬ್ಬ ಜನಸಾಮಾನ್ಯರಿಗೂ ಇದರ ಪರಿಣಾಮ ತಟ್ಟುತ್ತಿದೆ. ಇದಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆ ಬಹಳ ಮಹತ್ವ ವಹಿಸುತ್ತದೆ. ವಿಶೇಷವೆಂದರೆ ಈ ಜೈವಿಕ ಇಂಧನವು ಪರಿಸರ ಸ್ನೇಹಿ ಹಾಗೂ ಕೃಷಿಗೆ ಪೂರಕವಾಗಿದೆ.
ಜೈವಿಕ ಇಂಧನವು ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಹಾಗೂ ಡೀಸೆಲ್ ಇವುಗಳು ಹಾಗೆಯೇ ವರ್ತಿಸುತ್ತದೆ. ಆದರೆ ಇವುಗಳ ಹಾಗೆ ಇಂಗಾಲದ ಡೈ ಆಕ್ಸೆöÊಡ್ನ ಪರಿಣಾಮವನ್ನು ಹೆಚ್ಚಿಸುವುದಿಲ್ಲ. ಇದು ನೇರವಾಗಿ ಅಥವಾ ಪರೋಕ್ಷವಾಗಿ ಸಸ್ಯಗಳಿಂದ ಕೃಷಿ ತ್ಯಾಜ್ಯಗಳಿಂದ ವಾಣಿಜ್ಯವಾಗಿ, ಸಾವಯವ ವಸ್ತುಗಳಿಂದ ಅಥವಾ ಕೈಗಾರಿಕಾ ತಾಜ್ಯಗಳಿಂದ ಉತ್ಪಾದಿಸಲಾಗುತ್ತದೆ. ಇವುಗಳನ್ನು ಘನ ಇಂಧನ, ದ್ರವ ಇಂಧನ ಹಾಗೂ ಅನಿಲ ಇಂಧನ ಎಂಬ ಮೂರು ಪರಿವರ್ತಿತ ರೂಪಗಳಲ್ಲಿ ವಿಂಗಡಿಸಬಹುದಾಗಿದೆ.

ಹೊಂಗೆ ಕೃಷಿಯಿಂದ ಆಗುವ ಲಾಭಗಳು
- ವಾತಾವರಕ್ಕೆ ಹೆಚ್ಚಿನ ಆಮ್ಲಜನಕ ಬಿಡುಗಡೆಗೊಳಿಸುತ್ತದೆ. ಭೂಮಿಗೆ ಹೆಚ್ಚಿನ ಸಾವಯವ ಪದಾರ್ಥ ಮತ್ತು ಸಾರಜನಕ ಒದಗಿಸುತ್ತದೆ. ಇದರಿಂದ ನೈಸರ್ಗಿಕವಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
- ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗುತ್ತದೆ. ಪರಿಸರ ಮಾಲಿನ್ಯ ಹಾಗೂ ಭೂತಾಪಮಾನ ಕಡಿಮೆಯಾಗುತ್ತದೆ. ಜೈವಿಕ ಇಂಧನದ ಬೀಜಗಳು ದೊರೆಯುತ್ತವೆ. ಇದರಿಂದ ಹೆಚ್ಚಿನ ಮತ್ತು ನಿರಂತರ ಆದಾಯ ದೊರೆಯುತ್ತದೆ.
- ಬೀಜಗಳಿಂದ ಉತ್ತಮವಾದ ಎಣ್ಣೆ ದೊರೆಯುತ್ತದೆ. ಇದನ್ನು ಕೀಟನಾಶಕವಾಗಿ, ನೋವು ನಿವಾರಕವಾಗಿ ಬಳಸಬಹುದು. ಈ ಎಣ್ಣೆಯಿಂದ ಜೈವಿಕ ಡೀಸೆಲ್ ಉತ್ಪಾದಸಿ ಬಳಸಲಾಗುತ್ತಿದೆ.
- ಗ್ಲಿಸರಿನ್ನ್ನು ಸೋಪು, ಔಷಧಿ, ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಉಪ ಉತ್ಪನ್ನ ಹಿಂಡಿಯನ್ನು ಉತ್ತಮ ಸಾವಯವ ಗೊಬ್ಬರವಾಗಿ ಬಳಸಬಹುದು.

ಉಪ ಉತ್ಪನ್ನಗಳ ಉಪಯೋಗಗಳು
ಹಿಂಡಿ: ಈ ಹಿಂಡಿಯಲ್ಲಿ ರಂಜಕ, ಸಾರಜನಕ ಮತ್ತು ಪೋಟ್ಯಾಷ್ನಂತಹ ಕೆಲವು ಪೋಷಕಾಂಶಗಳು ಇರುವುದರಿಂದ ಇದು ಉತ್ತಮ ಸಾವಯವ ಗೊಬ್ಬರವಾಗಿದೆ ಹಾಗೂ ಗೋಬರ್ ಅನಿಲ ಘಟಕಕ್ಕೆ ಈ ಹಿಂಡಿಯನ್ನು ಉಪಯೋಗಿಸಲಾಗುತ್ತದೆ. ಹಿಂಡಿಗಳಲ್ಲಿನ ಪೋಷಕಾಂಶಗಳನ್ನು ನೋಡುವುದಾದರೆ 100 ಗ್ರಾಂ ಹಿಂಡಿಗಳಲ್ಲಿತೈಲವಸ್ತು 27.5 ಗ್ರಾಂ, ಪ್ರೋಟೀನ್ 17.4 ಗ್ರಾಂ, ಪಿಷ್ಟ 06.6 ಗ್ರಾಂ ಹಾಗೂ ಲವಣ 02.4 ಗ್ರಾಂ ಇರುತ್ತದೆ. ಅದೇ ರೀತಿ ಸಾರಜನಕ 50.0 ಗ್ರಾಂ, ರಂಜಕ 01.0 ಗ್ರಾಂ, ಪೋಟ್ಯಾಷಿಯಂ 01.3 ಗ್ರಾಂ, ನಾರು ಪದಾರ್ಥ 07.3 ಗ್ರಾಂನಷ್ಟಿರುತ್ತದೆ.
ಗ್ಲಿಸರಿನ್: ಜೈವಿಕ ಇಂಧನ ತಯಾರಿಕೆಯಲ್ಲಿ ದೊರೆಯುವ ಕಚ್ಚಾ ಗ್ಲಿಸರಿನ್ ಅನ್ನು ಸಾಬೂನು, ಸೌಂದರ್ಯವರ್ಧಕ ಮತ್ತು ಔಷಧಿಗಳನ್ನು ತಯಾರಿಸಲು ಬಳಸುತ್ತಾರೆ.
ಹೊಂಗೆ ಎಣ್ಣೆ: ಮುಖ್ಯವಾಗಿ ಹೊಂಗೆ ಎಣ್ಣೆಯನ್ನು ಜೈವಿಕ ಇಂಧನ ತಯಾರಿಸಲು ಉಪಯೋಗಿಸಲಾಗುತ್ತದೆ ಹಾಗೂ ಈ ಎಣ್ಣೆಯು ಪೂಜೆ – ಪುನಸ್ಕಾರಗಳಿಗೆ ಶ್ರೇಷ್ಠವಾಗಿರುವುದರಿಂದ ಇದನ್ನು ದೀಪಕ್ಕಾಗಿ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಬಳಸಬಹುದು. ಈ ಎಣ್ಣೆಯು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಕೀಲು-ಮೂಳೆ, ನರ ನೋವುಗಳ ನಿವಾರಣೆಗಾಗಿ ಬಳಸಬಹುದು.
ಹೊಂಗೆ ಕೃಷಿಗೆ ನರೇಗಾ ನೆರವು
ಹೊಂಗೆ ಬೇಸಾಯದಿಂದ ರೈತರು ಹಲವಾರು ಲಾಭಗಳನ್ನು ಪಡೆಯಬಹುದು. ರೈತರಿಗೆ ಹೊಂಗೆ (ಹುಲುಗಲ) ಗಿಡ ಕಲ್ಪವೃಕ್ಷವಿದ್ದಂತೆ. ರೈತರು ತಮ್ಮ ಜಮೀನಿನ ಬದುಗಳಲ್ಲಿ ಹೊಂಗೆ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಕೃಷಿಗೆ ಯೋಗ್ಯವಲ್ಲದ ಪಡ, ಜವಗು, ಜಮೀನುಗಳಲ್ಲಿ ಬೆಳೆದು ಆದಾಯ ಪಡೆಯಬಹುದು.
ಜಮೀನಿನ ಬದುಗಳಲ್ಲಿ ಹಾಗೂ ಪಡ ಬಿದ್ದ ಜಮೀನುಗಳಲ್ಲಿ ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಲು ಸರ್ಕಾರದಲ್ಲಿ ಸಾಕಷ್ಟು ಅನುಕೂಲಗಳಿವೆ. ಗ್ರಾಮ ಪಂಚಾಯತ್ನಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಕಾರ್ಡ್ ಮಾಡಿಸುವುದರಿಂದ ಸಸಿಗಳನ್ನು ನೆಡಲು, ಗುಂಡಿ ತೋಡಲು ಹಣ ನೀಡಲಾಗುತ್ತದೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ಕಡಿಮೆ ದರದಲ್ಲಿ ಸಸಿ ನೀಡಲಾಗುತ್ತದೆ. ಅಲ್ಲದೇ ಸಸಿಗಳ ನಿರ್ವಹಣೆಗಾಗಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹೀಗಾಗಿ ರೈತರು ಆಸಕ್ತಿ ವಹಿಸಿ ಇದರ ಅನುಕೂಲವನ್ನು ಮಾಡಿಕೊಳ್ಳಬೇಕು.

ಬೇಸಾಯ ಹೇಗೆ?
ಹೊಂಗೆ ಗಿಡಗಳನ್ನು ಹೊಲದ ಬದುಗಳಲ್ಲಿ ಅಥವಾ ಪಡಾ ಬಿದ್ದ ಜಮೀನಿನಲ್ಲಿ 15 ಅಡಿಗೆ ಒಂದರಂತೆ ಸಸಿಗಳನ್ನು ನೆಡಬಹುದು. ಇದಕ್ಕಾಗಿ 1.5X1-5X1.5 ಅಡಿ ಅಳತೆಯ ಗುಂಡಿಗಳನ್ನು ತೆಗೆದು ಅದರಲ್ಲಿ ಮಣ್ಣಿನೊಂದಿಗೆ ಕೊಟ್ಟಿಗೆ/ಸಾವಯವ ಗೊಬ್ಬರ ಹಾಕಿ ಒಂದು ವರ್ಷದ ಮೇಲ್ಪಟ್ಟಿನ ಸಸಿಗಳನ್ನು ನೆಡಬೇಕು. ಹೊಂಗೆ ಗಿಡ ಹೆಚ್ಚು ಬರ ನೀರೋಧಕ ಶಕ್ತಿಯನ್ನು ಹೊಂದಿರುವುದರಿಂದ ಚೆನ್ನಾಗಿ ಬೆಳೆಯುತ್ತವೆ ಮತ್ತು ಸಸಿ ಹಚ್ಚಿದ 4-5 ವರ್ಷದ ನಂತರ ಪ್ರತಿ ಗಿಡವು 10 ರಿಂದ 40 ಕೆ.ಜಿ. ಬೀಜಗಳನ್ನು ನೀಡುತ್ತದೆ.
ಗಿಡ ಬೆಳೆಯುತ್ತಾ ಹೋದಂತೆ ಹೆಚ್ಚಿನ ಇಳುವರಿ ದೊರೆಯುತ್ತದೆ. ಈ ಗಿಡ ಜುಲೈ ತಿಂಗಳಿನಿಂದ ಹೂ ಬಿಟ್ಟು, ಕಾಯಿಯಾಗಿ ಫೆಬ್ರುವರಿಯಿಂದ ಜೂನ್ ತಿಂಗಳವರೆಗೆ ಉತ್ತಮ ಬೀಜ ನೀಡುತ್ತದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಹನುಮನಮಟ್ಟಿಯಲ್ಲಿ ಸ್ಥಾಪಿತಗೊಂಡ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದಿಂದ ಬೀಜಗಳನ್ನು ಖರೀದಿಸಲಾಗುತ್ತದೆ.
`ರೈತರು ಹೊಂಗೆ ಬೆಳೆದರೆ ಹೆಂಗೆ? ಜೇಬು ತುಂಬ ಹಣ ಹಂಗೆ ಎಂದು ಹೇಳಬಹುದು’. ರೈತರು, ಕಾರ್ಮಿಕರು ಈ ಸುಧಾರಣೆಯೊಂದಿಗೆ ಉತ್ತಮ ಪರಿಸರ ನಿರ್ಮಾಣ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಕೈ ಜೋಡಿಸಬೇಕು.
- ಡಾ. ಪ್ರಿಯ ಪಿ ಮತ್ತು ಡಾ. ಕೊಟೇಶಪ್ಪ ಕೊರವರ, ಕೃಷಿ ಮಹಾವಿದ್ಯಾಲಯ ಹನುಮನಮಟ್ಟಿ, ರಾಣಿಬೆನ್ನೂರು
1 thought on “Honge Krushi- ಹಾವೇರಿ ರೈತರಿಗೆ ವರದಾನವಾಗುವ ಹೊಂಗೆ ಕೃಷಿ | ರಾಣೇಬೆನ್ನೂರು ಹನುಮನಮಟ್ಟಿ ಜೈವಿಕ ಇಂಧನ ಕೇಂದ್ರದ ಮಾಹಿತಿ”